
ಉಡುಪಿ: ಮಹಿಳೆಯೊಬ್ಬರಿಗೆ ನಿಮ್ಮ ಆಧಾರ್ ನಂಬರು ಬಳಸಿ ಸಿಮ್ ಖರೀದಿ ಮಾಡಿ ಅದರಲ್ಲಿ ಸ್ಕ್ಯಾಮ್ ಮೆಸೇಜ್ ಮತ್ತು ಟ್ರೇಡಿಂಗ್ ಮೆಸೇಜ್ ಕಳುಹಿಸುತ್ತಿರುವುದಾಗಿ ನಂಬಿಸಿ ಲಕ್ಷಾಂತರ ರೂ.ಗಳನ್ನು ಲಪಟಾಯಿಸಿದ ಘಟನೆ ನಡೆದಿದೆ.
ವಿದ್ಯಾ ಎನ್ನುವವರಿಗೆ ಅಪರಿಚಿತ ವ್ಯಕಿಯೋರ್ವ ಕರೆ ಮಾಡಿ ಏರ್ಟೆಲ್ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ.
ನಿಮ್ಮ ಆಧಾರ್ ನಂಬರು ಬಳಸಿ ಮುಂಬಯಿಯಲ್ಲಿ ಯಾರೋ ಸಿಮ್ ಖರೀದಿ ಮಾಡಿ ಅದರಲ್ಲಿ ಸ್ಕ್ಯಾಮ್ ಮೆಸೇಜ್ ಮತ್ತು ಟ್ರೇಡಿಂಗ್ ಮೆಸೇಜ್ ಕಳುಹಿಸುತ್ತಿದ್ದು ನಿಮ್ಮ ಎಲ್ಲ ಮೊಬೈಲ್ ನಂಬರ್ ಬ್ಲಾಕ್ ಮಾಡಲಾಗುವುದು ಎಂದು ಹೇಳಿದ್ದ. ಬಳಿಕ ಕರೆಯನ್ನು ಸಹರಾ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿದ.
ಬಳಿಕ ಮೋಹನ್ ಕುಮಾರ್ ಎಂಬಾತ ಮಾತನಾಡಿ, ತಾನು ಸಹರಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಂದು ಹೇಳಿ ನಂಬಿಸಿದ್ದಾನೆ.
ನಿಮ್ಮ ಆಧಾರ್ ಕಾರ್ಡ್ನ ಮುಖಾಂತರ ಮುಂಬಯಿ ಎಸ್ಬಿಐ ಬ್ಯಾಂಕ್ನಲ್ಲಿ ಖಾತೆ ತೆರೆದಿದ್ದು ಈ ಖಾತೆಯನ್ನು ವಿವೇಕ್ದಾಸ್ ಎಂಬವರು ಆಪರೇಟ್ ಮಾಡಿ ಸದರಿ ಖಾತೆಗೆ ಹ್ಯುಮೆನ್ ಟ್ರಾಫಿಕಿಂಗ್ ಮತ್ತು ಮನಿ ಲ್ಯಾಂಡ್ರಿಂಗ್ ಮುಖಾಂತರ ಹಣ ವರ್ಗಾವಣೆ ಮಾಡಿರುತ್ತಾರೆ. ಖಾತೆ ನಿಮ್ಮ ಹೆಸರಿನಲ್ಲಿ ಇರುವುದರಿಂದ ನಿಮ್ಮ ಎಲ್ಲ ಅಕೌಂಟ್ ಪರಿಶೀಲನೆ ಮಾಡಬೇಕಾಗಿದೆ ಎಂದು ನಂಬಿಸಿದ್ದಾನೆ.
ನಂತರ ನೀವು ಕೂಡ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವಿರಿ, ಎಲ್ಲಿಗೂ ಹೋಗುವಂತಿಲ್ಲ, ಎಲ್ಲಿಗೆ ಹೋಗುವುದಿದ್ದರೂ ನಮಗೆ ತಿಳಿಸಬೇಕು ಎಂದು ಬೆದರಿಸಿ ನಿಮ್ಮ ಎಲ್ಲ ಅಕೌಂಟ್ ಸೀಜ್ ಆಗುತ್ತದೆ. ಆದ್ದರಿಂದ ನಿಮ್ಮ ಅಕೌಂಟ್ನಲ್ಲಿರುವ ಎಲ್ಲ ಹಣವನ್ನು ನಾನು ಹೇಳಿದ ಯುಪಿಐ ನಂಬರಿಗೆ ಹಾಗೂ ಬ್ಯಾಂಕ್ ಖಾತೆಗೆ ಕಳುಹಿಸಿ ಎಂದು ತಿಳಿಸಿದ್ದಾನೆ.
ಇದನ್ನು ನಂಬಿದ ವಿದ್ಯಾ ಅ. 16ರಿಂದ ನ. 7ರ ವರೆಗೆ ಹಂತ ಹಂತವಾಗಿ 19,71,679 ರೂ.ಗಳನ್ನು ವರ್ಗಾಯಿಸಿ, ಹಣ ಕಳೆದುಕೊಂಡಿದ್ದಾರೆ.
ಈ ಘಟನೆ ಸಂಬಂಧ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
