ದುಬೈ: ಭಾನುವಾರ ಇಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ಡೆವೊನ್ ಕಾನ್ವೇ ಬದಲಿಗೆ ಡೆರಿಲ್ ಮಿಚೆಲ್ ಆಡುತ್ತಿದ್ದಾರೆ.
ಟೀಂ ಇಂಡಿಯಾ ಕೂಡ ಹರ್ಷಿತ್ ರಾಣಾಗೆ ವಿಶ್ರಾಂತಿ ನೀಡಿದ್ದು, ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಕರೆತಂದಿದೆ.
ಟಾಸ್ ಸೋತ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಈ ಹಿಂದಿನ ಎರಡು ಪಂದ್ಯಗಳಲ್ಲಿ ಚೇಸ್ ಮಾಡಿದ್ದ ಕಾರಣ ನಾವು ಮೊದಲು ಬ್ಯಾಟಿಂಗ್ ಮಾಡಲು ಬಯಸಿದ್ದೆವು. ಇದೀಗ ಟಾಸ್ ಸೋತಿದ್ದು, ಬ್ಯಾಟಿಂಗ್ ಸಿಕ್ಕಿದೆ. ಎರಡೂ ಪಂದ್ಯಗಳಲ್ಲಿ ನಾವು ಒಟ್ಟು 19 ವಿಕೆಟ್ಗಳನ್ನು ಪಡೆದಿದ್ದೇವೆ. ನಮ್ಮ ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಸೀಮರ್ಗಳು ವಿಕೆಟ್ಗಳನ್ನು ಪಡೆದಿದ್ದಾರೆ ಎಂದರು.
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇದೀಗ ತಮ್ಮ ವೃತ್ತಿ ಜೀವನದ 300ನೇ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ. ಕಿವೀಸ್ ವಿರುದ್ಧದ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಬ್ಯಾಟಿಂಗ್ ಮಾಂತ್ರಿಕ ತಮ್ಮ 300ನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಈ ಮೂಲಕ ಈ ಮೈಲಿಗಲ್ಲನ್ನು ತಲುಪಿದ 7ನೇ ಭಾರತೀಯ ತಾರೆಯಾಗಲಿದ್ದಾರೆ.
