Home ಸುದ್ದಿಗಳು ಸಿಎಂಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರೆಂದರೆ ಅಲರ್ಜಿ: ಬಿ.ವೈ.ವಿಜಯೇಂದ್ರ

ಸಿಎಂಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರೆಂದರೆ ಅಲರ್ಜಿ: ಬಿ.ವೈ.ವಿಜಯೇಂದ್ರ

People of Dakshina Kannada district are allergic to CM: B.Y.Vijayendra

ಬಂಟ್ವಾಳ: ದ.ಕ.ಜಿಲ್ಲೆಯ ಜನತೆಯ ರಕ್ತದಲ್ಲಿ ಹಿಂದುತ್ವವೇ ತುಂಬಿರುವುದರಿಂದ ಸಿಎಂ ಸಿದ್ಧರಾಮಯ್ಯರಿಗೆ ಜಿಲ್ಲೆಯ ಜನರೆಂದರೆ ಅಲರ್ಜಿಯಾಗಿದೆ. ಹೀಗಾಗಿ ನಮ್ಮ ಜಿಲ್ಲೆಗೆ ಅನುದಾನವೂ ಇಲ್ಲ, ಯಾವುದೇ ಸಚಿವರು ಕೂಡ ಜಿಲ್ಲೆಗೆ ಬರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಅವರು ಬಿ.ಸಿ.ರೋಡಿನ ಬಂಟರ ಭವನದಲ್ಲಿ ನಡೆದ ದ.ಕ.ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಸರಕಾರವು ಪ್ರತಿ ಬಾರಿ ಪಂಚಾಯತ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಗೌರವ ನೀಡುವ ಕಾರ್ಯ ಮಾಡಿದೆ. ಆದರೆ ಈಗಿನ ಕಾಂಗ್ರೆಸ್‌ ಸರಕಾರ ಯಾವುದೇ ಕೆಲಸಗಳನ್ನು ಮಾಡಿಸದೆ ಅಭಿವೃದ್ಧಿ ಶೂನ್ಯ ಸರಕಾರ ಎನಿಸಿಕೊಂಡಿದೆ ಎಂದರು.

ಕಾಂಗ್ರೆಸ್ ಪಕ್ಷ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸದನದಲ್ಲೇ ಒಪ್ಪಿದ್ದಾರೆ. ಮೈಸೂರಿನ ಮುಡಾ ಹಗರಣದಲ್ಲೂ ಸಿದ್ದರಾಮಯ್ಯ ಅದೇ ರೀತಿ ಹೇಳಿದ್ದರು. ಆದರೆ ಯಾವುದೇ ಪರಿಹಾರ ನಿರೀಕ್ಷೆ ಮಾಡದೇ ನಿವೇಶನ ಹಿಂದೆ ಕೊಟ್ಟಿದ್ದಾರೆ. ಮೊದಲು ಪರಿಹಾರ ಕೊಡಿ ಎಂದಿದ್ದ ಸಿದ್ದರಾಮಯ್ಯ ಈಗ ಪರಿಹಾರ ಕೇಳದೇ ಹಿಂದಿರುಗಿಸಿದ್ದಾರೆ. ಈ ಮೂಲಕ ತಪ್ಪು ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು.

ನಮ್ಮ ಕಾರ್ಯಕರ್ತ ಕಿಶೋರ್‌ಕುಮಾರ್‌ ಅವರು ಅತಿ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ. ಸಜ್ಜನಿಕೆಯ ರಾಜಕಾರಣಿ ಆಗಿರುವ ಅವರು ಕೋಟ ಅವರ ಸ್ಥಾನವನ್ನು ತುಂಬುವ ಮೂಲಕ ಪಂಚಾಯತ್‌ ಸದಸ್ಯರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದರು.

ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಕಾಂಗ್ರೆಸ್‌ ಸರಕಾರವು ಮದ್ಯ, ಪೆಟ್ರೋಲ್‌, ಹಾಲಿನ ದರ ಜಾಸ್ತಿ ಮಾಡಿ ಗ್ಯಾರಂಟಿಗೆ ಹಣ ಹೊಂದಿಸುತ್ತಿದ್ದು, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅಭಿವೃದ್ಧಿಗೆ ಹಣ ತರುವುದು ಕನಸಿನ ಮಾತಾಗಿದೆ ಎಂದರು.

 
Previous articleಅ. 24 ರಿಂದ ಉಡುಪಿಯಲ್ಲಿ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ
Next articleಇಂದಿರಾ ಕ್ಯಾಂಟೀನ್‌ ಬಳಿ ಖಾಸಗಿ ಬಸ್‌ ನಿರ್ವಾಹಕನ ಶವ ಪತ್ತೆ