
ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತಿಮ ಸಂಸ್ಕಾರ ಇಂದು ಸಂಜೆ 4 ಗಂಟೆಗೆ ಮುಂಬೈನ ವರ್ಲಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನೆರವೇರಲಿದೆ.
ಟಾಟಾ ಅವರ ಪಾರ್ಥಿವ ಶರೀರವನ್ನು ನಾರಿಮನ್ ಪ್ಲಾಂಟ್ನಲ್ಲಿರುವ ಎನ್ಸಿಪಿಎ ಲಾನ್ನಲ್ಲಿ ಬೆಳಗ್ಗೆ ಅಂತಿಮ ದರ್ಶನಕ್ಕೆ ಇಡಲಾಗಿದೆ.
ರತನ್ ಟಾಟಾ ಅವರು ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಪಾರ್ಸಿ ಆಚರಣೆಗಳ ಬದಲಿಗೆ ಹಿಂದೂ ಸಂಪ್ರದಾಯಗಳ ಪ್ರಕಾರ ಅವರ ಅಂತಿಮ ವಿಧಿಗಳನ್ನು ನಡೆಸಲಾಗುವುದು.
ವರ್ಲಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಸಂಜೆ 4 ಗಂಟೆಯಿಂದ ಸುಮಾರು 45 ನಿಮಿಷಗಳ ಕಾಲ ಪ್ರಾರ್ಥನೆ ನಡೆಯಲಿದ್ದು, ನಂತರ ಅಂತಿಮ ವಿಧಿವಿಧಾನಗಳು ಪೂರ್ಣಗೊಳ್ಳಲಿವೆ.
ಸೆಪ್ಟೆಂಬರ್ 2022 ರಲ್ಲಿ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಅಂತಿಮ ವಿಧಿಗಳನ್ನು ಹಿಂದೂ ಸಂಪ್ರದಾಯಗಳ ಪ್ರಕಾರ ನಡೆಸಲಾಯಿತು.
ಪಾರ್ಸಿ ಸಂಪ್ರದಾಯ: ಪಾರ್ಸಿ ಸಮುದಾಯದಲ್ಲಿ ಮೃತ ದೇಹವನ್ನು ಸುಡುವುದು ಅಥವಾ ಹೂಳುವುದಿಲ್ಲ. ಪಾರ್ಸಿ ಧರ್ಮದಲ್ಲಿ, ಸಾವಿನ ನಂತರ, ಟವರ್ ಆಫ್ ಸೈಲೆನ್ಸ್ ಅಥವಾ ದಖ್ಮಾ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಸ್ಮಶಾನದಲ್ಲಿ ರಣಹದ್ದುಗಳು ತಿನ್ನಲು ದೇಹವನ್ನು ತೆರೆದ ಸ್ಥಳದಲ್ಲಿ ಇಡಲಾಗುತ್ತದೆ.
