ಕೊಪ್ಪಳ: ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ ಕೊಪ್ಪಳ ಜಿಲ್ಲೆಯ ಸಾಣಾಪುರ ಗ್ರಾಮದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣದ ನಂತರ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ.
ಕೊಪ್ಪಳ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಇದೀಗ ಹಲವಾರು ರಾಯಭಾರ ಕಚೇರಿಗಳು ತಮ್ಮ ದೇಶಗಳ ಪ್ರವಾಸಿಗರ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಮುಖ್ಯಮಂತ್ರಿ ಕಚೇರಿ ಮತ್ತು ಕೊಪ್ಪಳ ಆಡಳಿತದೊಂದಿಗೆ ಸಂಪರ್ಕ ಸಾಧಿಸಿವೆ.
ಹಂಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಇಸ್ರೇಲ್ನಿಂದ ಸುಮಾರು ಶೇ. 60 ರಷ್ಟು ವಿದೇಶಿ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಕಳೆದ ಎರಡು ದಿನಗಳಲ್ಲಿ, ಹಂಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ 25 ಕ್ಕೂ ಹೆಚ್ಚು ಹೋಂಸ್ಟೇಗಳಿಂದ ತಮ್ಮ ಏಜೆನ್ಸಿಗಳ ಮೂಲಕ ಬುಕಿಂಗ್ ರದ್ದು ಮಾಡಲಾಗಿದೆ.
ಕೊಪ್ಪಳ ಘಟನೆಯು ಹಂಪಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ ಹೇಳಿದ್ದಾರೆ. “ಘಟನೆ ವರದಿಯಾದ ನಂತರ, ಹೋಂಸ್ಟೇಗಳಲ್ಲಿ ಬುಕಿಂಗ್ಗಳಲ್ಲಿ ಇಳಿಕೆ ಕಂಡುಬಂದಿದೆ” ಎಂದು ಅವರು ತಿಳಿಸಿದ್ದಾರೆ.
ಇತರ ರಾಜ್ಯಗಳ ಪ್ರವಾಸಿಗರು ಕೂಡಾ ಹಂಪಿಗೆ ತಮ್ಮ ಭೇಟಿಯನ್ನು ರದ್ದುಗೊಳಿಸುತ್ತಿದ್ದಾರೆ ಇಲ್ಲವೇ ಮುಂದೂಡುತ್ತಿದ್ದಾರೆ. ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸಬೇಕು ಎನ್ನುವ ಸಲಹೆ ಕೇಳಿಬರುತ್ತಿದೆ. ಏತನ್ಮಧ್ಯೆ, ವಿಜಯನಗರ ಪೊಲೀಸರು ಹಂಪಿ ಮತ್ತು ಸುತ್ತಮುತ್ತಲಿನ ಎಲ್ಲಾ ಹೋಂಸ್ಟೇಗಳ ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ. ಕೊಪ್ಪಳ ಘಟನೆಯು ಎಲ್ಲಾ ಹೋಂಸ್ಟೇ ಮಾಲೀಕರು ಮತ್ತು ಪೊಲೀಸ್ ಇಲಾಖೆಗೆ ಎಚ್ಚರಿಕೆಯಾಗಿದೆ ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ ಎಲ್ ತಿಳಿಸಿದ್ದಾರೆ.
ಇಡೀ ರಾಷ್ಟ್ರವು ಕೊಪ್ಪಳದ ಅತ್ಯಾಚಾರ ಘಟನೆಯನ್ನು ಖಂಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಧರಾಶಾಯಿಯಾಗಿರುವುದನ್ನು ಈ ಘಟನೆ ಸೂಚಿಸುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
