ಉಡುಪಿ: ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳ ವಿವಿಧ ಭಾಗಗಳಲ್ಲಿ ಈಗಾಗಲೇ ವಿಜೃಂಭಣೆಯಿಂದ ನಡೆಯುತ್ತಿದ್ದು, ನಾಳೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ರಾಜ ಮನೆತನದ ಸಂಪ್ರದಾಯದಂತೆ ಕಂಬಳ ವೈಭವದಿಂದ ಜರುಗಲಿದೆ.
ವರ್ಷಂಪ್ರತಿ ನಡೆಯುವ ಐತಿಹಾಸಿಕ ಕಟಪಾಡಿ ಕಂಬಳದಲ್ಲಿ ಬೀಡಿನ ಮನೆಯ ಕೋಣಗಳನ್ನು ಓಲಗ, ವಾದ್ಯಗಳೊಂದಿಗೆ ಮೊದಲು ಕೆಸರು ಗದ್ದೆಗಿಳಿಸುತ್ತಿದ್ದಂತೆ, ಈ ಬಾರಿಯೂ ಈ ವಾಡಿಕೆಯನ್ನು ಮುಂದುವರಿಸಿಕೊಂಡು ಕಂಬಳ ನಡೆಯಲಿದೆ. ಕಟಪಾಡಿ ಮೂಡು ಪಡು ಕಂಬಳಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದ್ದು, ಅರಸು ಮನೆತನದವರಿಂದ ಕಟಪಾಡಿ ಕಂಬಳ ಆರಂಭವಾಗಿ ನಂತರದ ದಿನಗಳಲ್ಲಿ ಮೂಡು ಪಡು ಕಂಬಳ ಹೊಸ ಆಯಾಮವನ್ನು ಇಂದು ಪಡೆದು ಕೊಂಡಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕಂಬಳ ಪ್ರಿಯರು ಕಾತುರದಿಂದ ನಿರೀಕ್ಷಿಸುವಂತೆ ಕಟಪಾಡಿ ಬೀಡು ಪಡುಕರೆ ಮೂಡುಕರೆ ಜೋಡು ಕರೆ ಕಂಬಳವು ನಾಳೆ ನಡೆಯಲಿದ್ದು, ಕಟಪಾಡಿ ಬೀಡು ಕಂಬಳ ಗದ್ದೆಯಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭಗೊಂಡು ಜಿಲ್ಲೆಯ ಪ್ರತಿಷ್ಠಿತ ಮನೆತನಗಳ ಒಗ್ಗಟಿನೊಂದಿಗೆ ವಿಜೃಂಭಣೆಯಿಂದ ಜರಗಲಿದೆ. ಬೆಳಿಗ್ಗೆ 10.30ಕ್ಕೆ ಕಟಪಾಡಿ ಬೀಡು ಗೋವಿಂದ ದಾಸ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಜರುಗಲಿದ್ದು ವಿವಿಧ ಗಣ್ಯರು ಆಗಮಿಸಲಿದ್ದಾರೆ.
