
ತಿರುಪತಿ ದೇವಾಲಯಕ್ಕೆ ಭಾರತ ಮಾತ್ರವಲ್ಲದೆ ದೇಶ ವಿದೇಶದಿಂದಲೂ ಬಹಳಷ್ಟು ಭಕ್ತರು ಆಗಮಿಸುತ್ತಾರೆ. ಇಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಆಂಧ್ರಪ್ರದೇಶದ ತಿರುಪತಿ ಎಂಬ ಬೆಟ್ಟ ಪ್ರದೇಶದಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ಈ ಸನ್ನಿಧಿ ಇರಲಿದ್ದು ಏಳುಮಲೆಗಳ ಮೇಲಿರುವ ಈ ದೇವಾಲಯದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ.
ಇಲ್ಲಿನ ವೆಂಕಟೇಶ್ವರ ಸ್ವಾಮಿಯ ಮುಖ್ಯ ವಿಗ್ರಹವು ತುಂಬಾ ವಿಶಿಷ್ಟ ಮತ್ತು ಶಕ್ತಿಯುತವಾಗಿದ್ದು ಪ್ರತಿದಿನವೂ ಇಲ್ಲಿ ವಿಗ್ರಹವನ್ನು ಹೂವುಗಳಿಂದ, ಉಡುಪುಗಳಿಂದ ಮತ್ತು ಆಭರಣಗಳಿಂದ ಅಲಂಕಾರ ಮಾಡಲಾಗುತ್ತೆ.
ಇನ್ನು ದೇವಾಲಯ ಅಂದಾಗ ಸಾಮಾನ್ಯವಾಗಿ ಸಾಂಪ್ರದಾಯಿಕ ಬಟ್ಟೆ ಧರಿಸಿ ಬರುತ್ತಾರೆ. ಸಾಮಾನ್ಯ ವಾಗಿ ಮಹಿಳೆಯರು ದೇವರ ಸನ್ನಿಧಾನಕ್ಕೆ ತೆರಳುವಾಗ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಅಂದರೆ ಸೀರೆ, ಹಳೆ,ಕುಂಕುಮ, ಹೂವು ಇತ್ಯಾದಿ ಮುಡಿದು ದೇವಾಲಯಗಳಿಗೆ ಹೋಗುತ್ತಾರೆ. ಅದರಲ್ಲೂ ಹೂ ಮುಡಿಯಲು ಹೆಚ್ಚಿನ ಪ್ರಶಾಸ್ತ್ಯವನ್ನು ನೀಡಲಾಗುತ್ತೆ. ಆದರೆ, ತಿರುಮಲದಲ್ಲಿ ಭಕ್ತರು ಹೂವನ್ನು ಮುಟ್ಟುವುದಕ್ಕೂ ಅವಕಾಶವಿಲ್ಲ ಯಾಕೆ ಗೊತ್ತೆ?
ಹೌದು, ಮಹಾವಿಷ್ಣುವನ್ನು ಬಹು ಅಲಂಕಾರ ಪ್ರಿಯ ಎಂದು ಹೇಳುತ್ತಾರೆ. ಹಾಗೇ ಶ್ರೀಹರಿಯನ್ನು ಹೂವಿನ ಪ್ರೇಮಿ ಎಂದೂ ಕರೆಯುತ್ತಾರೆ. ತಿರುಮಲ ಎಂಬುದು ಹೂವಿನ ಮಂಟಪವಾಗಿರುವುದರಿಂದ ಶ್ರೀಹರಿಯು ಹೂವಿನ ಅಲಂಕಾರ ಪ್ರಿಯನಾಗಿರುವುದರಿಂದ ನಿತ್ಯವೂ ಭಗವಂತನಿಗೆ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಇಲ್ಲಿ ಅರಳುವ ಪ್ರತಿಯೊಂದು ಹೂವು ಇಲ್ಲಿನ ದೇವರಿಗೆ ಸಮರ್ಪಿತವಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ.
ಹಾಗಾಗಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಯಾವುದೇ ಭಕ್ತರಾಗಲಿ ಹೂವುಗಳನ್ನು ಮುಟ್ಟಬಾರದು ಎಂಬ ನಿಯಮ ಆಚರಣೆಯಲ್ಲಿದೆ. ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಇದನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಹಾಗಾಗಿ ಈ ಕಾರಣದಿಂದಲೇ ಇಲ್ಲಿ ದರ್ಶನಕ್ಕೆ ಬರುವ ಮಹಿಳೆಯರು ತಲೆಯಲ್ಲಿ ಹೂ ಮುಡಿಯುವುದಿಲ್ಲ.
